ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಸೋಮವಾರ, ಮಾರ್ಚ್ 21

ಮನ ಕದಡುವ ಕಂದಹಾರ್; ಇದು ದೇಶಪ್ರೇಮಿಗಳ ಕಥನ

            ’ಕಂದಹಾರ್’ ಇದೊಂದು ಉತ್ತಮ ದೇಶಪ್ರೇಮ ವಾಸನೆಯುಳ್ಳ ಚಿತ್ರ. ತೆರೆಗೆ ತೆರೆದುಕೊಳ್ಳುವ ಮೊದಲೇ ಬಹಳಷ್ಟು ಚರ್ಚೆಯಾದ ಮಲೆಯಾಳಿ ಚಿತ್ರ. ಸದಾ ಹೊಸತನವನ್ನು ಹುಡುಕುವ ಮಲೆಯಾಳಿ ಚಿತ್ರಗಳಲ್ಲಿ ಇದು ಒಂದು. ಈ ಚಿತ್ರದ ಪ್ರಮುಖ ಆಕರ್ಷಣೆಯೆಂದರೆ ಇದರ ಕಥಾಹಂದರ, ಮತ್ತು ನಾಯಕರು. ಭಾರತೀಯ ಚಿತ್ರ ಜಗತ್ತಿನ ದಿಗ್ಗಜರಾದ ಮೋಹನ್ ಲಾಲ್ ಹಾಗೂ ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸಿರುವುದು ಚಿತ್ರದ ಮತ್ತೊಂದು ಆಕರ್ಷಣೆ. ಅದರಲ್ಲಿಯೂ ಅಮಿತಾಬ್ ನಟಿಸುತ್ತಿರುವ ಮೊದಲ ಮಲೆಯಾಳಿ ಚಿತ್ರ.
        ಹಲವು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ನಡೆದ ಕಂದಹಾರ್ ವಿಮಾನ ಅಪಹರಣದ ನೈಜ ಘಟನೆಯನ್ನು ಮುಖ್ಯ ಕಥಾವಸ್ತುವಾಗಿರಿಸಿಕೊಂಡು, ಭಯೋತ್ಪಾದನೆಯ ವಿವಿಧ ಮಜಲುಗಳನ್ನು ಈ ಚಿತ್ರ ಸವಿವರವಾಗಿ ಹೇಳುತ್ತದೆ. ಸೇನೆಯಲ್ಲಿ ಮೇಜರ್ ಆಗಿದ್ದ ರವಿಯವರು ಕಂದಹಾರ್‌ನ ಕಥೆಯನ್ನ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ನಿರ್ದೇಶನದಲ್ಲಿ ರವಿ ಸೈ ಎನಿಸಿದ್ದಾರೆ. ಮೋಹನಲಾಲ್ ಮತ್ತು ರವಿ ಜೊತೆಯಾಗಿ ಮಾಡುತ್ತಿರುವ ಮೂರನೆಯ ಚಿತ್ರವಿದು. ಈ ಮೂರು ಚಿತ್ರಗಳು ದೇಶಪ್ರೇಮಕ್ಕೆ ಸಂಬಧಿಸಿದ ಚಿತ್ರಗಳು ಎನ್ನುವುದು ವಿಶೇಷ.
    ಸ್ವತಃ ಮೋಹನ್ ಲಾಲ್, ಸುನಿಲ್ ಸಿ ನಾಯರ್‌ರೊಂದಿಗೆ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಅಮಿತಾಬ್ ಇಲ್ಲಿ ಲೋಕ್‌ನಾಥ್ ಶರ್ಮ ಎಂಬ ಮೇಷ್ಟರ ಪಾತ್ರವನ್ನು ನಿರ್ವಹಿಸಿದ್ದು, ಭಾಷೆ ಬೇರೆಯಾ ದರೂ ತನ್ನ ನೈಜ ಅಭಿನಯಕ್ಕೆ ಕೊಂಚವೂ ಕೊರತೆಯಿಲ್ಲದೆ ಅಭಿನಯಿಸಿದ್ದಾರೆ. ಮೇಜರ್ ಮಹಾದೇವನ್ ಪಾತ್ರದಲ್ಲಿ ಮೋಹನ್ ಲಾಲ್ ಮನೋಜ್ಞವಾಗಿ ನಟಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
     ಸುಮಾರು ೬ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಊಟಿ, ದೆಹಲಿ, ರಷ್ಯ ಮುಂತಾದೆಡೆಗಳಲ್ಲಿ ಚಿತ್ರೀಕರಣಗೊಂಡಿದೆ. ಶಮೀರಾ ಟಂಡನ್ ಸಂಗೀತ ತಕ್ಕಮಟ್ಟಿಗೆ ಇಂಪಾಗಿದೆ. ಖ್ಯಾತ ಕ್ಯಾಮರಮ್ಯಾನ್ ರವಿವರ್ಮ ತನ್ನ ಕೈ ಚಳಕವನ್ನು ಚಿತ್ರದುದ್ದಕ್ಕೂ ತೋರಿಸಿದ್ದು ಎಲ್ಲಿಯೂ ಅತಿಯೆನಿಸದ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ, ಒಟ್ಟಿನಲ್ಲಿ ಪ್ರತಿ ಚಿತ್ರದಲ್ಲಿ ಹೊಸತನವನ್ನು ಬಯಸುವ ಪ್ರೇಕ್ಷಕರಿಗೆ ನಿರ್ದೇಶಕರು ಮೋಸಮಾಡದೆ ಸದಭಿರುಚಿಯ ಚಿತ್ರವನ್ನೇ ನೀಡಿದ್ದಾರೆ.
 ಎಲ್ಲರಲ್ಲು, ಅದರಲ್ಲೂ ಯುವಪೀಳಿಗೆಯಲ್ಲಿ   ದೇಶಪ್ರೇಮ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಇಂತಹ ಚಿತ್ರ ತಯಾರಿಸಿ ಅವರನ್ನು ದೇಶ ಪ್ರೇಮದೆಡೆಗೆ ಚಿಂತಿಸುವಂತೆ ಮಾಡಿದ ಚಿತ್ರತಂಡದ ಕಾರ್ಯ ಶ್ಲಾಘನೀಯ. ಖಂಡಿತವಾಗಿಯೂ ನೀವೂ ಕೂಡ ಒಮ್ಮೆ ಈ ಚಿತ್ರ ನೋಡಿ ದೇಶಪ್ರೇಮ ಹೆಚ್ಚಿಸಿಕೊಳ್ಳಿ.